Sunday 4 November 2018

ಶಿಲ್ಪದಲ್ಲಿ ಕಂಡ ವಿಶ್ವ! ಇದು ಪ್ರಾಚೀನ ಭಾರತದ ರಾಯಭಾರ


   
ಭಾರತ ವಿಶ್ವದ ಇತರ ರಾಷ್ಟ್ರಗಳ ಜೊತೆ ಸಂಪರ್ಕ ಬೆಳೆಸಿದ್ದು ಯಾವಾಗ? ಆಧುನಿಕ ಇತಿಹಾಸಕಾರರಂತೂ 15ನೇ ಶತಮಾನದವರೆಗೂ ದಕ್ಷಿಣ ಭಾರತಕ್ಕೆ ವಿಶ್ವದ ಸಂಪರ್ಕವೇ ಇರ್ಲಿಲ್ಲ ಅಂತ ವಾದಿಸ್ತಾರೆ. ಹಾಗಾದ್ರೆ ವಾಸ್ಕೋಡಿಗಾಮನಿಗಿಂತ ಮೊದಲು  ಭಾರತಕ್ಕೆ ಬೇರೆ ರಾಷ್ಟ್ರಗಳ ಜೊತೆಗೂ ಸಂಪರ್ಕವೇ ಇರಲಿಲ್ವಾ? ಖಂಡಿತಾ ಇತ್ತು ಅನ್ನುತ್ತೆ ಭಾರತದ ಪ್ರಾಚೀನ ಚರಿತ್ರೆ. ವಾಸ್ಕೋಡಿಗಾಮನಿಂತ ಸಾವಿರಾರು ವರ್ಷಗಳ ಹಿಂದೆಯೇ ಈ ದೇಶದ ಜನ, ವಿಶ್ವದ ಹಲವು ದೇಶಗಳ ಜೊತೆ  ಬಾಂಧವ್ಯ ಹೊಂದಿದ್ರು. ಅಷ್ಟೇಅಲ್ಲ, ವ್ಯಾಪಾರ ವಹಿವಾಟನ್ನೂ ನಡೆಸ್ತಿತ್ತು. ಭಾರತದ ಹಲವು ದೇವಾಲಯಗಳ ಗೋಡೆಗಳಲ್ಲಿರೋ ವಿದೇಶಿಯರ ಶಿಲ್ಪಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಷ್ಟೇಅಲ್ಲ, ಪಾಶ್ಚಿಮಾತ್ಯರು ಹೇಳುವಂತೆ ಇದೊಂದು ಹಾವಾಡಿಗರ ದೇಶವಾಗಿರ್ಲಿಲ್ಲ. ಅತ್ಯಂತ ಆಧುನಿಕ ಸಮಾಜ ಇಲ್ಲಿತ್ತು  ಅನ್ನೋದಕ್ಕೂ ನಮ್ಗೆ ಸಾಕಷ್ಟು ಪುರಾವೆಗಳನ್ನ ಸಿಕ್ತಾವೆ. ಆ ಪುರಾವೆಗಳಿಗೆ ಇಲ್ಲಿವೆ ನೋಡಿ ಕೆಲವು ಉದಾಹರಣೆಗಳು. 
  
ತಲೆ ಮೇಲೆ ಟೋಪಿ, ಮುಖದ ಮೇಲೆ ಫ್ರೆಂಚ್ ಗಡ್ಡ, ತುಂಬು ತೋಳಿನ ಶರ್ಟ್​ ತೊಟ್ಟು ಕೂತ ಈ ಶಿಲ್ಪವನ್ನೊಮ್ಮೆ ನೋಡಿಬಿಡಿ. ಮೊದಲ ನೋಟದಲ್ಲೇ ಇದೊಂದು ಪಾಶ್ಚಿಮಾತ್ಯನ ಶಿಲ್ಪ ಅನ್ನೋದು ಎಂಥವರಿಗೂ ಗೊತ್ತಾಗಿಬಿಡುತ್ತೆ. ಯಾಕೆಂದ್ರೆ ಈ ಶಿಲ್ಪವಿರೋ ದೇವಾಲಯದ ಗೋಡೆಗಳಲ್ಲಿ ಅಂದಿನ ಭಾರತದ ಜನಜೀವನ ಹೇಗಿತ್ತು ಅಂತ ಹೇಳೋ ಬೇರೆ ಶಿಲ್ಪಗಳೂ ನಮ್ಗೆ ಕಾಣೋಕೆ ಸಿಕ್ತಾವೆ. ಈ ಭಾರತೀಯ ಶಿಲ್ಪಗಳ ವೇಷ-ಭೂಷಣ ಈ ವಿದೇಶಿಗಳ ಶಿಲ್ಪಕ್ಕಿಂತ ತೀರಾ ಭಿನ್ನವಾಗಿದೆ ಅನ್ನೋದು ನಮ್ಗಿಲ್ಲಿ ಸುಲಭವಾಗಿ ಗೊತ್ತಾಗುತ್ತೆ..

ಇಷ್ಟಕ್ಕೂ ವಿದೇಶಿಗನ ಈ ಶಿಲ್ಪವಿರೋ ಮಂದಿರ ಯಾವ್ದು ಅಂದುಕೊಂಡ್ರಿ! ತಂಜಾವೂರಿನ  ಬೃಹದೀಶ್ವರ ಮಂದಿರ. ನಮ್ಗೆಲ್ಲ ಗೊತ್ತಿರೋ ಹಾಗೇ ಪ್ರಾಚೀನ ದೇವಾಯಲಗಳ ಗೋಡೆಗಳಲ್ಲಿ ರಾಮಾಯಣದ ಸನ್ನಿವೇಶಗಳನ್ನೋ, ಮಹಾಭಾರತದ ಕಥೆಗಳನ್ನೋ ಚಿತ್ರಿಸೋದು ಸಾಮಾನ್ಯ. ಆದ್ರೆ ಈ ಬೃಹದೀಶ್ವರನ ಮಂದಿರದಲ್ಲಿ ಇತರ ಸಾಂಪ್ರದಾಯಿಕ ಶಿಲ್ಪಗಳ ಜೊತೆ ಈ ವಿದೇಶಿಗನ ಶಿಲ್ಪವನ್ನೂ ನಾವು ಕಾಣ್ಬಹುದು.

ಆಧುನಿಕ ಚರಿತ್ರಕಾರರ ಪ್ರಕಾರ- ಯೂರೋಪಿಯನ್ನರು ಮೊದಲು ಭಾರತಕ್ಕೆ ಕಾಲಿಟ್ಟಿದ್ದು 14ನೇ ಶತಮಾನದ ಅಂತ್ಯಭಾಗದಲ್ಲಿ, ಅಂದ್ರೆ 1498ರಲ್ಲಿ. ಸಮುದ್ರಯಾನದ ಮೂಲಕ ಬಂದಿಳಿದ ವಾಸ್ಕೋಡಿಗಾಮನೇ ಭಾರತಕ್ಕೆ ಭೇಟಿ ನೀಡಿದ ಮೊದಲ ಯೂರೋಪಿಯನ್ ಅಂತಾರೆ ಮಾಡ್ರನ್ ಹಿಸ್ಟೋರಿಯನ್​ಗಳು. ಆದ್ರೆ, ತಂಜಾವೂರಿನ ಈ ಬೃಹದೀಶ್ವರ ಮಂದಿರ ನಿರ್ಮಾಣವಾಗಿದ್ದು ಯಾವಾಗ ಗೊತ್ತಾ? ಕ್ರಿ.ಶ 1010ರಲ್ಲಿ,  ಅಂದ್ರೆ ವಾಸ್ಕೋಡಿಗಾಮ ಭಾರತಕ್ಕೆ ಕಾಲಿಡೋದಕ್ಕೂ 500 ವರ್ಷಗಳ ಹಿಂದೆ.  ಅಂದಹಾಗೆ, ವಾಸ್ಕೋಡಗಾಮ ಭಾರತಕ್ಕೆ ಬರೋದಕ್ಕೂ ನೂರಾರು ವರ್ಷಗಳ ಹಿಂದೆಯೇ ಈ ದೇಶಕ್ಕೆ ವಿದೇಶಿಗರು ಕಾಲಿಟ್ಟಿದ್ರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರೋದು ಬೃಹದೀಶ್ವರ ಮಂದಿರದ ಮೇಲಿರೋ ಈ ವಿದೇಶಿಗನ ಶಿಲ್ಪ.
  
ಇಷ್ಟಕ್ಕೂ ಬೃಹದೀಶ್ವರ ಮಂದಿರದ ಮೇಲಿರೋ ಈ ವಿದೇಶಿಗನ ಶಿಲ್ಪವಾದ್ರೂ ಯಾರದ್ದು? ಈ ಬಗ್ಗೆ ಹಿಸ್ಟೋರಿಯನ್ ಗಳು ಏನ್ ಹೇಳ್ತಾರೆ? ಅನ್ನೋದನ್ನೂ ಸ್ವಲ್ಪ ಹೇಳ್ತೀವಿ ಕೇಳಿ. ಚರಿತ್ರಕಾರರ ಪ್ರಕಾರ- ಈ ಶಿಲ್ಪ ಅಂದಿನ ಪ್ರಾನ್ಸ್​ ರಾಜನಾಗಿದ್ದ ಈ 2ನೇ ರಾಬರ್ಡ್​ದು. ದೇಗುಲದ ಮೇಲಿರೋ ಈ ಶಿಲ್ಪಕ್ಕೂ, ಕ್ರಿ.ಶ 996ರಿಂದ 1031ರವರೆಗೆ ಪ್ರಾನ್ಸ್ ನ ರಾಜನಾಗಿದ್ದ ರಾಬರ್ಟ್​ಗೂ ತುಂಬಾನೇ ಸಾಮ್ಯತೆಯಿದೆ ಅಂತಾರೆ ಸಂಶೋಧಕರು. ಈ ಶಿಲ್ಪದಲ್ಲಿ ಟೋಪಿಯನ್ನ ಹೊರತುಪಡಿಸಿ ಮುಖದ ಮೇಲಿರೋ ಫ್ರೆಂಚ್ ಗಡ್ಡ, ನೀಳವಾದ ಉದ್ದನೆಯ ಮೂಗು, ತುಂಬುತೋಳಿನ ನಿಲುವಂಗಿ  ಹೀಗೆ ಪ್ರಾನ್ಸ್ ದೊರೆ 2ನೇ ರಾಬರ್ಟ್​ ನ ಎಲ್ಲ ಲಕ್ಷಣಗಳೂ ಈ ಶಿಲ್ಪದಲ್ಲಿವೆ ಅನ್ನೋದು ಸಂಶೋಧಕರ ವಾದ.

ವಿಶೇಷ ಅಂದ್ರೆ, ಸಂಶೋಧಕರ ಈ ವಾದಕ್ಕೆ ಪುಷ್ಟಿ ನೀಡೋದು ತಮಿಳುನಾಡಿನ ಪ್ರಸಿದ್ಧ ದೊರೆ ಈ ರಾಜರಾಜ ಚೋಳನ ಚರಿತ್ರೆ. ಅದು 10ನೇ ಶತಮಾನದ ಕಾಲಘಟ್ಟ. ಆ ಕಾಲಘಟ್ಟದ ತಂಜಾವೂರಿನ ಚರಿತ್ರೆಯ ಪುಟಗಳನ್ನ ತೆರೀತಾ ಹೋದ್ರೆ ಅಚ್ಚರಿಯ ಮಾಹಿತಿಗಳು ನಮ್ಗೆ ಸಿಗ್ತಾವೆ. ಆಗ ಚೋಳರ ಪ್ರಸಿದ್ದ ದೊರೆಯಾಗಿದ್ದ ರಾಜರಾಜ ಚೋಳ, 10ನೇ ಶತಮಾನದಲ್ಲೇ ವಿಶ್ವದ ಹಲವು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಸಿದ್ದ ಕಥೆಗಳು ನಮ್ಮ ಮುಂದೆ ತೆರೆದುಕೊಳ್ತಾವೆ. ಒಂದು ಮೂಲದ ಪ್ರಕಾರ, ಈ ರಾಜರಾಜ ಚೋಳ, ಪ್ರಾನ್ಸ್ ದೊರೆ 2ನೇ ರಾಬರ್ಟ್​ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅನ್ನುತ್ತೆ ತಮಿಳುನಾಡಿನ ಹಿಸ್ಟರಿ. ಆಗಿನ ಕಾಲಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಶ್ರೀಲಂಕಾದಿಂದ ಹಿಡಿದು  ಉತ್ತರದ ಕಳಿಂದವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ ಈ ಚೋಳರ ದೊರೆ, ಸಮುದ್ರ ಮಾರ್ಗದ ಮೂಲಕ ಪ್ರಾನ್ಸ್ ಜೊತೆಗೂ ವ್ಯಾಪಾರ ಸಂಬಂಧ ಬೆಸೆದಿದ್ದ ಅಂದ್ರೆ ನಿಜಕ್ಕೂ ಅಚ್ಚರಿ ಎನಿಸುತ್ತೆ..

ಪ್ರಾನ್ಸ್ ದೇಶದ ಜೊತೆಗಿದ್ದ ವ್ಯಾಪಾರ ಸಂಬಂಧದ ಗುರುತಾಗಿ ರಾಜರಾಜ ಚೋಳ ಅಂದಿನ ಫ್ರಾನ್ಸ್ ದೊರೆಯಾಗಿದ್ದ 2ನೇ ರಾಬರ್ಟ್ ಚಿತ್ರವನ್ನ ಈ ಬೃಹದೀಶ್ವರ ಮಂದಿರ ಮೇಲೆ ಕೆತ್ತಿಸಿದ್ದ ಅನ್ನುತ್ತೆ ದೇಗುಲದ ಚರಿತ್ರೆ. ವಿಶೇಷ ಅಂದ್ರೆ, ಇದೇ ದೇಗುಲ ಮತ್ತೊಂದು ಬದಿಯಲ್ಲಿರೋ ವಿದೇಶಿಗನ ಶಿಲ್ಪವನ್ನೂ ನಾವ್ ನಿಮ್ಗೆ ತೋರಿಸ್ತೀವಿ ನೋಡಿ.  

ನೆಲಕ್ಕೆ ಬಾಗಿರೋ ಉದ್ದನೆಯ ಮೀಸೆ, ನೀಳವಾದ ಗಡ್ಡ ಹಾಗೂ ತಲೆಮೇಲೆ ಧರಿಸಿರೋ ವಿಚಿತ್ರ ಟೋಪಿ. ಇಂಥ ವಿಚಿತ್ರ ವೇಷಭೂಷಣ ಧರಿಸಿರೋ ಈಶಿಲ್ಪ ಚೀನಾ ರಾಜನದ್ದು ಅಂದ್ರೆ ನೀವೂ ನಂಬ್ಲೇಬೇಕು. ಹೌದು, 11ನೇ ಶತಮಾನದಲ್ಲಿ ಚೀನಾವನ್ನ ಆಳ್ವಿಕೆ ನಡೆಸ್ತಿದ್ದ ಜಿನ್ ರಾಜಮನೆತದ ಕಿಂಗ್ ಈತ. ಅಂದ್ರೆ 11ನೇ ಶತಮಾನದಲ್ಲೇ ರಾಜ ರಾಜ ಚೋಳ, ಪ್ರಾನ್ಸ್ ಮಾತ್ರವಲ್ಲ, ಚೀನಾದ ಜೊತೆಗೂ ಸಂಪರ್ಕ ಹೊಂದಿದ್ದ ಅನ್ನೋದಕ್ಕೆ ಈ ಚೀನಾ ರಾಜನ ಶಿಲ್ಪವೇ ಪ್ರತ್ಯಕ್ಷ ಸಾಕ್ಷಿ. ಅಂದ್ರೆ ಭಾರತೀಯ ರಾಜರು ಸಾವಿರ ವರ್ಷಗಳ ಹಿಂದೆಯೇ ವಿಶ್ವದ ಹಲವು ರಾಷ್ಟ್ರ ಜೊತೆ ಸಂಬಂಧ ಹೊಂದಿದ್ರು ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ನಮ್ಗೆ ಬೇಕಾ? 

ದುರಂತ ಅಂದ್ರೆ ಆಧುನಿಕ ಚರಿತ್ರೆ 1000 ವರ್ಷಗಳ ಹಿಂದೆಯೇ ಭಾರತ, ವಿಶ್ವದ ಯಾವ ದೇಶಗಳ ಜೊತೆಗೂ ಸಂಪರ್ಕ ಹೊಂದಿರಲಿಲ್ಲ. ಎನ್ನುತ್ತೆ. ಆದ್ರೆ ಈ ರಾಜರಾಜ ಚೋಳ ನಿರ್ಮಿಸಿದ ಈ ಬೃಹದೀಶ್ವರ ಮಂದಿರ,  10ನೇ ಶತಮಾನದಲ್ಲೇ ಭಾರತ ವಿಶ್ವದ ಎರಡು ಪ್ರಮುಖ ದೇಶಗಳ ಜೊತೆ ವ್ಯಾಪಾರಿ ಸಂಬಂಧ ಹೊಂದಿತ್ತು ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.  ಅಷ್ಟೇಅಲ್ಲ, ವಿದೇಶಗಳನ್ನ ಸಂಪರ್ಕಿಸೋಕೇ ಬೇಕಾದ ನೌಕಾತಂತ್ರ ಜ್ಞಾನವೂ ಈ ದೇಶದ ರಾಜರಿಗೆ ತಿಳಿದಿತ್ತು ಇದರಿಂದಲೇ ನಮ್ಗೆ ಗೊತ್ತಾಗುತ್ತೆ.

ಭಾರತದ ದೇಗುಲಗಳಲ್ಲಿರೋ ವಿದೇಶಿಗರ ಶಿಲ್ಪಗಳು ಮಾತ್ರವಲ್ಲ, ಕೆಲವು ಪ್ರಾಣಿಗಳ ಶಿಲ್ಪಗಳೂ  ವಿಶ್ವ ಚರಿತ್ರೆಯ ಭಾಗಗಳೇ ಆಗಿವೆ. ಪ್ರಾಚೀನ ಮಂದಿರಗಳ ಗೋಡೆಗಳಲ್ಲಿರೋ ಆ ಪ್ರಾಣಿ ಶಿಲ್ಪಗಳು ಅಂದಿನ ಕಾಲಕ್ಕೆ ಭಾರತಕ್ಕಿದ್ದ ಬಾಂಧವ್ಯದ ಕಥೆಯನ್ನ ಹೇಳುತ್ವೆ.  

ಇದು ತಮಿಳುನಾಡಿನ  ಶ್ರೀರಂಗಂ ದೇಗುಲದ ಅಂಗಳದಲ್ಲಿರೋ 1000 ಸಾವಿರ ಕಂಬಗಳ ಮಂಟಪ. ಮುಗಿಲಿಗೆ ನೆಗೆದಂತೆ ಕೆತ್ತಿರೋ ಕುದುರೆಗಳ ಸಾಲು ಸ್ತಂಭಗಳು ಈ ಮಂಟಪದ ಪ್ರಮುಖ ಆಕರ್ಷಣೆ. ವಿಶೇಷ ಅಂದ್ರೆ ಶತಮಾನಗಳ ಹಿಂದೆಯೇ ಭಾರತದ ರಾಜರಿಗಿದ್ದ ವಿದೇಶಿ ಸಂಬಂಧಗಳ ಚರಿತ್ರೆಯೂ ಈ ಶಿಲಾಮಂಟಪದಲ್ಲಿದೆ ಅಂದ್ರೆ ನೀವು ನಂಬ್ತೀರಾ? ಹೌದು, ಭಾರತದ ವೈಭವದ ಚರಿತ್ರೆಯ ಭಾಗವೇ ಆಗಿರೋ ಈ ಶಿಲಾಮಂಟಪದಲ್ಲಿ, ಹಲವು ಅಚ್ಚರಿಗಳಿವೆ. 

ಎರಡೂ ಕಾಲುಗಳನ್ನೆತ್ತಿ ನಿಂತಿರೋ ಈ ಬೃಹತ್ ಕುದುರೆಯ ಕೆಳಭಾಗದಲ್ಲಿ 3 ಶಿಲ್ಪಗಳನ್ನು ಕೆತ್ತಿರೋದನ್ನ ನೀವಿಲ್ಲಿ ನೋಡ್ಬಹುದು. ಇಲ್ಲಿರೋ ಮೂರು ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇವು ಸೈನಿಕರ ಶಿಲ್ಪಗಳು. ಈ ಮೂವರು ಪೈಕಿ ಹಿಂಬದಿಯಲ್ಲಿರೋದು ಚೀನಾ ದೇಶದ ಸೈನಿಕ. ಇಷ್ಟಕ್ಕೂ ಈ ಚೀನಾ ಸೈನಿಕ ಅನ್ನೋದನ್ನ ಹೇಗೆ ತಿಳಿಯೋದು ಅಂತ ನೀವು ಕೇಳ್ಬಹುದು. ಈತನ ಇಳಿಬಿದ್ದ ಮೀಸೆ, ಅಷ್ಟೇಅಲ್ಲ, ಈತನ ದಿರಿಸಿನಲ್ಲಿರೋ ಸಾಲು ಸಾಲು ಬಟನ್​ಗಳೇ ಸಾಕು ಈತನೊಬ್ಬ ಚೀನೀ ಸೈನಿಕ ಅಂತ ಗುರುತಿಸೋದಕ್ಕೆ. ಅದೇನೇ ಇರ್ಲಿ, ಈ ಚೀನೀ ಸೈನಿಕ, ತನ್ನ ಮುಂಭಾಗದಲ್ಲಿರೋ ಭಾರತೀಯರ ಸೈನಿಕನ ತೊಡೆಗೆ ಚೂರಿಯಿಂದ ಇರಿಯುತ್ತಿರುವಂತೆ ಇಲ್ಲಿ ಚಿತ್ರಿಸಲಾಗಿದೆ. ಅಷ್ಟೇಅಲ್ಲ, ಭಾರತೀಯ ಸೈನಿಕ ತನ್ನ ಮುಂದಿರೋ ಮತ್ತೊಬ್ಬ ಚೀನೀ ಸೈನಿಕನ ತೊಡೆಗೆ ಇರಿಯುತ್ತಿದ್ದಾನೆ.

ಹೀಗೆ ಈ ಮೂವರು ಸೈನಿಕರ ಪರಸ್ಪರಿ ಇರಿದುಕೊಳ್ತಿರೋ ಈ ವಿಚಿತ್ರ ವರ್ತನೆಯ ಹಿಂದಿರೋ ಗೂಢಾರ್ಥವೇನು? ತಿರುಚಿಯ ಈ ಶ್ರೀರಂಗಂ ದೇಗುಲಕ್ಕೂ ಚೀನಾ ಸೈನಿಕರಿಗೂ ಇರೋ ಸಂಬಂಧವಾದ್ರೂ ಏನು? ನಿಜಕ್ಕೂ ಇವತ್ತು ಸಂಶೋಧನೆಗೆ ಒಳಪಡಬೇಕಾಗಿರೋ ವಿಚಾರ ಇದು. ಇಷ್ಟಕ್ಕೂ ಈ ಶಿಲ್ಪವನ್ನ ಕೆತ್ತೋದಕ್ಕೆ ಭಾರತೀಯ ಶಿಲ್ಪಿಗೆ ಚೀನಾ ಸೈನಿಕರ ಸ್ಪಷ್ಟ ಕಲ್ಪನೆ ಇರಲೇಬೇಕಲ್ವಾ? ಚೀನಾದ ಸಂಪರ್ಕವಿಲ್ಲದೆ, ಅಂದಿನ ಚೀನಾ ಸೈನಿಕರ ವೇಷಭೂಷಣಗಳ ಅರಿವಿಲ್ಲದೆ ಇಂಥದೊಂದು ಕರಾರುವಾಕ್ ಶಿಲ್ಪವನ್ನ ಕೆತ್ತೋಕಾದ್ರೂ ಸಾಧ್ಯವಿದೆಯಾ? 

ವಿಶೇಷ ಅಂದ್ರೆ, ಶ್ರೀರಂಗಂ ದೇಗುಲದಲ್ಲಿರೋ ಈ ಶಿಲಾಮಂಟಪ ನಿರ್ಮಾಣವಾಗಿದ್ದು 6ನೇ ಶತಮಾನದಲ್ಲಿ. ಅಂದಹಾಗೇ, ಅಂದಿನ ಕಾಲಕ್ಕೇ ಮಧುರೈ ನಾಯಕರಿಗೆ, ಹಾಗೂ ಪಲ್ಲವ ಅರಸರಿಗೆ ಚೀನಾದ ಸಂಪರ್ಕ ಇತ್ತು ಅನ್ನೋದನ್ನ ಈ ಶಿಲ್ಪ ನಮ್ಗೆ ಸಾರಿ ಸಾರಿ ಹೇಳುತ್ತೆ. ಯಾಕೆಂದ್ರೆ, 6ನೇ ಶತಮಾನದಲ್ಲೇ ಆಧುನಿಕ ನೌಕೆಗಳ ಮೂಲಕ ಪಲ್ಲವ ರಾಜರು, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾಗೆ ಹೋದ ಕಥೆಗಳು ನಮ್ಗೆ ಸಿಗ್ತಾನೆ. ಅಷ್ಟೇಅಲ್ಲ, ಪಲ್ಲವ ರಾಜರು, ಇಂಡೋನೇಷ್ಯಾದಿಂದ ಚೀನಾಗೂ ತಮ್ಮ ವ್ಯಾಪಾರ ಸಂಬಂಧವನ್ನ ವಿಸ್ತರಿಸಿದ್ರು ಅನ್ನುತ್ತೆ ಪಲ್ಲವರ ಚರಿತ್ರೆ..

ಅಚ್ಚರಿಯ ಸಂಗತಿ ಎನ್ ಗೊತ್ತಾ? ಈ ಚೀನಾ ಸೈನಿಕರ ಶಿಲ್ಪ ಮಾತ್ರವಲ್ಲ, ಶ್ರೀರಂಗಂನ ಈ ಶಿಲಾಮಂಟದಲ್ಲಿರೋ ಈ ಒಂಟೆಯ ಶಿಲ್ಪವೂ ಅಚ್ಚರಿಯ ಕಥೆ ಹೇಳುತ್ತೆ. ಅಂದಿನ ಕಾಲಕ್ಕೇ  ಭಾರತದ ರಾಜರಿಗಿದ್ದ ವಿದೇಶ ಬಾಂಧವ್ಯದ ಚರಿತ್ರೆಯನ್ನ ನಮ್ಮ ಮುಂದೆ ಬಿಚ್ಚಿಡುತ್ತೆ. ನಿಮ್ಗೆಲ್ಲ ಗೊತ್ತಿರೋ ಹಾಗೇ ಮರಳುಗಾಡಿನ ಹಡಗು ಅಂತಲೇ ಕರೆಸಿಕೊಂಡಿರೋ ಈ ಒಂಟೆಗಳ ಮೂಲ ಭಾರತವಲ್ಲ ! ಇಷ್ಟಕ್ಕೂ ಈ ಒಂಟೆಗಳು ಭಾರತಕ್ಕೆ ಬಂದಿದ್ದಾದ್ರೂ ಎಲ್ಲಿಂದ ಅಂತೀರಾ? ಒಂದು ಸಾವಿರ ವರ್ಷಗಳ ಹಿಂದೆ ಮಧ್ಯ ಏಷ್ಯಾ ರಾಷ್ಟ್ರಗಳಿಂದ ಒಂಟೆಗಳನ್ನ ಭಾರತಕ್ಕೆ ಆಮದು ಮಾಡಿಕೊಳ್ಳಲಾಯ್ತು ಅಂತಾರೆ ಇತಿಹಾಸ ಸಂಶೋಧಕರು. ಆದ್ರೆ ಶ್ರೀರಂಗಂ ಮಂಟದಲ್ಲಿರೋ ಈ ಒಂಟೆಯ ಶಿಲ್ಪವನ್ನ ಬಿಡಿಸಿರೋದು 1500 ವರ್ಷಗಳ ಹಿಂದೆ. ಅಂದಹಾಗೆ ಆಧುನಿಕ ಇತಿಹಾಸಕಾರರು ಬರೆದೆ ಚರಿತ್ರೆಗಿಂತಲೂ 500 ವರ್ಷಗಳ ಹಿಂದೆಯೇ ಈ ಶಿಲ್ಪಿಗಳಿಗೆ ಒಂಟೆಗಳ ಪರಿಕಲ್ಪನೆ ಇತ್ತು ಅನ್ನೋದು ಸಂಗತಿ ಈ ಒಂಟೆ ಶಿಲ್ಪದಿಂದಲೇ ನಮ್ಗೆ ಗೊತ್ತಾಗುತ್ತೆ..
  
ಇದು ಶ್ರೀರಂಗಂನಲ್ಲಿರೋ ಒಂಟೆ ಶಿಲ್ಪದ ಕಥೆಯಾದ್ರೆ, ಇನ್ನು ಒಡಿಶಾದ ಕೊನಾರ್ಕ್ ಮಂದಿರದಲ್ಲಿರೋ ಈ ಜಿರಾಫೆ ಶಿಲ್ಪದ ಕಥೆಯನ್ನೂ ಸ್ವಲ್ಪ ಹೇಳ್ತೀವಿ ಕೇಳಿ. ಆಫ್ರಿಕಾ ಜನರ ಗುಂಪೊಂದು ಭಾರತೀಯ ರಾಜನೊಬ್ಬರನ್ನು ಭೇಟಿ ಮಾಡ್ತಿರೋ ಸನ್ನಿವೇಶವನ್ನ ಈ ಶಿಲ್ಪದಲ್ಲಿ ಕೆತ್ತಲಾಗಿದೆ. ವಿಶೇಷ ಅಂದ್ರೆ, ಈ ಆಫ್ರಿಕನ್ನರ ಜೊತೆ ಅಲ್ಲಿ ಪ್ರಾಣಿ ಜಿರಾಫೆಯನ್ನೂ ಈ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಅಂದಹಾಗೆ ಒಡಿಶಾದ ಈ ಕೊನಾರ್ಕ್ ಮಂದಿರ ನಿರ್ಮಾಣವಾಗಿದ್ದು ಕ್ರಿ.ಶ 1250ರಲ್ಲಿ. ಅಂದ್ರೆ 750 ವರ್ಷಗಳ ಹಿಂದೆಯೇ ಭಾರತೀಯರಿಗೆ ಆಫ್ರಿಕಾ ಸಂಸ್ಕೃತಿಯ ಪರಿಚಯ ಇದ್ದಿರಬಹುದು ಅನ್ನೋ ಮಾಹಿತಿಯನ್ನ ಈ ಶಿಲ್ಪ ನಮ್ಗೆ ನೀಡುತ್ತೆ. ಅಷ್ಟೇಅಲ್ಲ, ಆಫ್ರಿಕಾದಲ್ಲೊಂದು ವ್ಯವಸ್ಥಿತ ಜನಜೀವನವೇ ಇರಲಿಲ್ಲ ಅಂತ ಹೇಳೋ ಆಧುನಿಕ ಚರಿತ್ರಕಾರರಿಗೂ ಈ ಶಿಲ್ಪ ಸ್ಪಷ್ಟ ಉತ್ತರ ನೀಡುತ್ತೆ. ಹೀಗೆ ದೇಗುಲಗಳ ಗೋಡೆಯ ಮೇಲಿರೋ ಸಾಲು ಸಾಲು ಶಿಲ್ಪಗಳು ವಿಶ್ವ ಚರಿತ್ರೆಯ ಕಥೆ ಹೇಳುತ್ವೆ. ಭಾರತದ ಪ್ರಾಚೀನ ಮಂದಿರಗಳು, ಬರೀ ಧಾರ್ಮಿಕ ಕೇಂದ್ರಗಳಾಗಿರ್ಲಿಲ್ಲ, ವಿಶ್ವ ಚರಿತ್ರೆಯ ಭಾಗಗಳೂ ಆಗಿದ್ವು ಅನ್ನೋದನ್ನ ಸಾರಿ ಸಾರಿ ಹೇಳುತ್ವೆ. 

No comments:

Post a Comment